ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ.
೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.[೧೩]
ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳುವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು (ಹಿಂದಿ ಭಾಷೆಯಲ್ಲಿ ಬಿಟ್ಟು) ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.[೧೪]
ಚರಿತ್ರೆ
ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ.
ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರೀಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ. ಪೂ. ೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನಮೌರ್ಯ ಸಾಮ್ರಾಜ್ಯ ದ ಭಾಗವಾಗಿತ್ತು (ಚರ್ಚೆ).
ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು.
ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು. ಅದರ ರಾಜಧಾನಿ ಬನವಾಸಿಯಾಗಿತ್ತು.ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ.
ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಟ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯ ದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ. ಶ. ೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.[೧೫]
ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗೂ ಪೂರ್ವ ಚಾಲುಕ್ಯರ ವಿರುದ್ಧ ನಿರಂತರ ಕಾಳಗದಲ್ಲಿರುತ್ತಿದ್ದರು. ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಚ್ರಾಯ ಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು.ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು.
ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆ ಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ವಿಜಯನಗರ ಸಾಮ್ರಾಜ್ಯವು ಶ್ರೀಕೃಷ್ಣದೇವರಾಯನ ಕಳಿಂಗ ಯುದ್ಧ ಸಾವಿರ ೧೫೧೨ ರಿಂದ ೧೫೧೮ :- ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ (ಒಡ್ರ ದೇಶದ Od ಒಡ್ ಸಮಾಜದವರು) ವಂಶಸ್ಥರಾದ ಗಜಪತಿ ಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಸಂಪೂರ್ಣ ಒರಿಸ್ಸಾ ವನ್ನು ಒಳಗೊಂಡಿತ್ತು ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಶ್ರೀಕೃಷ್ಣದೇವರಾಯನ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿ ಪ್ರತಾಪರುದ್ರ ದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದ ತನ್ನ ದೃಷ್ಟಿಯನ್ನು ತಿರುಗಿಸಿದನು ವಿಜಯನಗರ ಸೈನ್ಯ ೧೫೧೨ ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೆ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿಯ ಸೈನ್ಯ ಹಸಿವಿನಿಂದ ಶೀತಲವಾಗ ತೊಡಗಿತು ಇದೇ ಸಮಯದಲ್ಲಿ ಶ್ರೀಕೃಷ್ಣದೇವರಾಯನ ಪತ್ನಿಯಾದ ತಿರುಮಲದೇವಿ ಮತ್ತು ಚಿನ್ನಮ್ಮ ದೇವಿ ಅವರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದರು ನಂತರ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕುತ್ತಿದ್ದರು ಕೆಲವು ಮೊದಮೊದಲು ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಇಂದಿಗೆಯಾಲಾರಂಭಿಸಿತು. ಅದೇ ಸಮಯದಲ್ಲಿ ತಿಮ್ಮರುಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯ ದಾರಿಯ ಮೂಲಕ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು ಆ ಕಾಲದ ಅತಿ ಸಮರ್ಥ ಕತ್ತಿವರಸೆ ಗಾರ ಎಂದು ಹೆಸರಾಗಿದ್ದ ಸೂರ್ಯವಂಶದ ಪ್ರತಾಪರುದ್ರದೇವ ನಮಗ ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು ಈ ವಿಜಯದ ನಂತರ ತಿಮ್ಮರುಸು ಕೊಂಡವೀಡು ಪ್ರಾಂತ್ಯದ ಮಾಂಡಳೀಕನಾಗಿ ನೇಮಕಗೊಂಡ ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಸೂರ್ಯವಂಶದ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುಖದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳ ಬೇಕೆಂದಿದ್ದ ಶ್ರೀ ಕೃಷ್ಣದೇವರಾಯನ ಗಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವ ನು ಶ್ರೀಕೃಷ್ಣದೇವರಾಯ ನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿ ಯೋಜನೆ ಹಾಕಿದರು ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗ ನಗರದಲ್ಲಿ ಸಂದೇಶಬೇಕಾಗಿತ್ತು ಆದರೆ ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವ ನತಿಸಿದ ತೆಲುಗು ಭಾಷೆ ಒಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದ್ದನ್ನು ಪ್ರತಾಪ ರುದ್ರನ ಯೋಜನೆ ನಡೆಯದೆ ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆ ಮಾಡಿದ ಇದರ ನಂತರ ಭಾರತದ ಎರಡು ಪ್ರಬಲ ಸಾಮ್ರಾಜ್ಯಗಳ ನಡುವೆ ಶಾಂತಿ-ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತ ವಾಯಿತು. ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆ ಯಾಯಿತು. ೧೫೬೫ರಲ್ಲಿ, ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ವಿಜಯಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು, ದಖನ್ ಪ್ರದೇಶವನ್ನು ಆಳುತ್ತಿದ್ದರು.
೧೭ನೆಯ ಶತಮಾನದ ಕೊನೆಯಲ್ಲಿ ವಿಜಯಪುರದ ಸುಲ್ತಾನರು ಮೊಘಲರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ವಿಜಯಪುರದ ಸುಲ್ತಾನರು ಉರ್ದು ಹಾಗೂ ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗೂ ಅನ್ಯ ರಾಜರು ಆಳುತ್ತಿದ್ದರು.
ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು.
ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟಿಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.
ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್" ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು.
೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.
ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಬಾಂಬೆ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ಕರ್ನಾಟಕದ ಹೆದ್ದಾರಿಗಳು
ಕರ್ನಾಟಕದ ಹೆದ್ದಾರಿಗಳು : ಕರ್ನಾಟಕ ರಾಜ್ಯದ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ. ಅವುಗಳನ್ನು ೫ ಭಾಗಗಳಾಗಿ ವಿಂಗಡಿಸಲಾಗಿದೆ.
ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ. (೬೩೨೯ ಅಡಿಗಳು)) ಕರ್ನಾಟಕದಲ್ಲಿ ಏಳು ಜಲಾನಯನ ಪ್ರದೇಶಗಳಿವೆ (river basin).[೧೬] ಅವುಗಳೆಂದರೆ:
ವಾಯುವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿವೆ, ತುಳುನಾಡಿನ ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ೧೯೫೬ ರಲ್ಲಿ ಬಾಂಬೆ, ಹೈದರಾಬಾದ್, ಮದ್ರಾಸ್ ರಾಜ್ಯಗಳಿಂದ ಬೇರ್ಪಟ್ಟ ಜಿಲ್ಲೆಗಳು ಹಾಗೂ ಕೊಡಗು, ಮೈಸೂರು ರಾಜ್ಯಕ್ಕೆ ಸೇರಿಕೊಂಡು ವಿಶಾಲ ಮೈಸೂರು ರಾಜ್ಯ ಉದಾಯವಾಯಿತು. ಹಾಗೂ ಕಾಲಾನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.
ಧಾರವಾಡದ ಶೀಸ್ಟಗಳು (ಪದರು ಶಿಲೆ) ಮತ್ತು ಪೆಡಸುಕಲ್ಲಿನ (ಗ್ರಾನೈಟ್) ನಯಿಸ್ (gneiss) ಗಳಿಂದ ಮಾಡಲ್ಪಟ್ಟ ಆರ್ಕಿಯನ್ ಸಂಕೀರ್ಣ.
ಕಲಡ್ಗಿ ಮತ್ತು ಭೀಮಾ ಸರಣಿಯ ಪ್ರೊಟೆರೋಜೋಯಿಕ್ ಅವಶೇಷ ರಹಿತ ಪದರು ರಚನೆಗಳು.
ದಖನ್ ಟ್ರ್ಯಾಪ್ಪಿಯನ್ ಮತ್ತು ಇಂಟರ್-ಟ್ರ್ಯಾಪ್ಪಿಯನ್ ನಿಕ್ಷೇಪಗಳು.
ಭೂರಚನೆಯ ತೃತೀಯ ಅವಧಿಯ ಹಾಗು ಇತ್ತೀಚಿನ ಲ್ಯಾಟರೈಟ್ ಗಳು ಮತ್ತು ಮೆಕ್ಕಲು ಮಣ್ಣಿನ ನಿಕ್ಷೇಪಗಳು.
ರಾಜ್ಯದ ೬೦% ಭಾಗ ನಯಿಸ್ (gneiss) ಗಳು, ಪೆಡಸುಕಲ್ಲುಗಳು (ಗ್ರಾನೈಟ್) ಹಾಗು ಚಾರ್ನೊಕೈಟ್ ಬಂಡೆಗಳಿಂದ ಕೂಡಿರುವ ಆರ್ಕಿಯನ್ ಸಂಕೀರ್ಣದಿಂದ ಆವೃತವಾಗಿದೆ. ಭೂರಚನೆಯ ತೃತೀಯ ಅವಧಿಯ ಆದಿಯಲ್ಲಿ ಜ್ವಾಲಾಮುಖಿ ಚಟುವಟಿಕೆಯ ನಿಲುಗಡೆಯ ನಂತರ ನಿರ್ಮಾಣ ವಾದ ಲ್ಯಾಟರೈಟ್ ಹೊದಿಕೆಗಳನ್ನು ದಖನ್ ಟ್ರ್ಯಾಪ್ಸಲ್ಲಿರುವ ಹಲವು ಜಿಲ್ಲೆಗಳಲ್ಲಿ ಕಾಣಬಹುದು.
ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳು
ಕರ್ನಾಟಕದಲ್ಲಿ ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳಿವೆ:
ಎಂಟಿಸೊಲ್ಸ್,
ಇನ್ಸೆಪ್ಟಿಸೊಲ್ಸ್,
ಮೊಲ್ಲಿಸೊಲ್ಸ್,
ಸ್ಪೊಡೊಸೊಲ್ಸ್,
ಅಲ್ಫಿಸೊಲ್ಸ್,
ಅಲ್ಟಿಸೊಲ್ಸ್,
ಆಕ್ಸಿಸೊಲ್ಸ್,
ಅರಿಡಿಸೊಲ್ಸ್,
ವರ್ಟಿಸೊಲ್ಸ್,
ಆಂಡಿಸೊಲ್ಸ್ ಮತ್ತು
ಹಿಸ್ಟೊಸೊಲ್ಸ್.
ಕರ್ನಾಟಕದ ಮಣ್ಣಿನ ಪ್ರಕಾರಗಳು
ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು:
ಕೆಂಪು ಮಣ್ಣು,
ಜೇಡಿ ಮಣ್ಣು,
ಕಪ್ಪು ಮಣ್ಣು,
ಮೆಕ್ಕಲು ಮಣ್ಣು,
ಅರಣ್ಯ ಮಣ್ಣು ಮತ್ತು
ಕರಾವಳಿ ಮಣ್ಣು.
ಕರ್ನಾಟಕ ನಾಲ್ಕು ಋತುಗಳು
ಕರ್ನಾಟಕ ನಾಲ್ಕು ಋತುಗಳನ್ನು ಅನುಭವಿಸುತ್ತದೆ.
ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲ,
ಮಾರ್ಚ್ ಮತ್ತು ಮೇಯಲ್ಲಿ ಬೇಸಿಗೆ ಕಾಲ,
ಜೂನ್ ನಿಂದ ಸೆಪ್ಟೆಂಬರ್ ವರೆಗೆ ವರ್ಷಾಕಾಲ ಹಾಗು
ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವರ್ಷೋತ್ತರ ಕಾಲ.
ಕರ್ನಾಟಕದ ಮೂರು ವಲಯಗಳು
ಹವಾಮಾನದ ಆಧಾರದ ಮೇಲೆ ಕರ್ನಾಟಕವನ್ನು ಮೂರು ವಲಯಗಳಾಗಿ ವಿಂಗಡಿಸಬಹುದು:
ದಕ್ಷಿಣ ಒಳನಾಡು. ಇವುಗಳಲ್ಲಿ ಕರಾವಳಿ ವಲಯವು ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಕರಾವಳಿ ವಲಯದ ವಾರ್ಷಿಕ ಸರಾಸರಿ ಮಳೆ ೩೬೩೮.೫ಮಿಲಿಮೀಟರ್ (೧೪೩ ಅಂಗುಲ) ರಾಜ್ಯದ ವಾರ್ಷಿಕ ಸರಾಸರಿ ಮಳೆ ೧೧೩೯ಮಿಲಿಮೀಟರ್ (೪೫ ಅಂಗುಲ)ಗಿಂತ ತುಂಬ ಜಾಸ್ತಿಯಿದೆ.
ಹವಾಮಾನ
ಕರ್ನಾಟಕದ ಅತಿ ಹೆಚ್ಚು ತಾಪಮಾನವಾದ ೪೫.೬°C (೧೧೪ °F) ರಾಯಚೂರಿನಲ್ಲಿ ದಾಖಲಾಯಿತು.
ಕರ್ನಾಟಕದ ಅತಿ ಕಡಿಮೆ ತಾಪಮಾನವಾದ ೨.೮°C (೩೭ °F) ಬೀದರಿನಲ್ಲಿ ದಾಖಲಾಯಿತು.
ಕರ್ನಾಟಕದ ಸುಮಾರು ೩೮,೭೨೪ ಚ.ಕಿಮೀ. (೧೪,೯೫೧ ಚ.ಮೈ) ಪ್ರದೇಶವು ಅರಣ್ಯದಿಂದ ಆವೃತವಾಗಿದೆ.
ಕರ್ನಾಟಕದ ಅರಣ್ಯ ಪ್ರದೇಶದ ಶೇಕಡಾವಾರು ಸಮಸ್ತ ಭಾರತದ ಸರಾಸರಿಯಾದ ೨೩%ಗಿಂತ ಸ್ವಲ್ಪ ಕಡಿಮೆಯಿದೆ ಹಾಗು ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ವಿಧಿಸಲಾದ ೩೩%ಗಿಂತ ಗಮನಾರ್ಹವಾಗಿ ಕಡಿಮೆಯಿದೆ.
ಪ್ರತಿಯೊಂದು ಜಿಲ್ಲೆಗೆ ಜಿಲ್ಲಾಧಿಕಾರಿ ಇರುತ್ತಾರೆ. ಸಹಾಯಕ ಕಮಿಷನರ್, ತಹಸೀಲುದಾರ, ಶಿರಸ್ತೆದಾರ/ಸಹಾಯಕ ತಹಸೀಲುದಾರ, ಕಂದಾಯ ಪರಿಶೀಲನಾಧಿಕಾರಿ, ಗ್ರಾಮ ಲೆಕ್ಕಿಗ ಮೊದಲಾದ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗೆ ನೆರವಾಗಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಇರುತ್ತಾರೆ.[೧೯] ಜಿಲ್ಲೆಯನ್ನು ವಿಭಾಗಿಸಿ ತಾಲೂಕುಗಳನ್ನು ರಚಿಸಲಾಗಿದೆ. ತಾಲೂಕನ್ನು ವಿಭಾಗಿಸಿ ಗ್ರಾಮಗಳನ್ನು ರಚಿಸಲಾಗಿದೆ. ಜಿಲ್ಲಾಡಳಿತದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳು, ಗ್ರಾಮ ಪಂಚಾಯತ್ ಗಳು, ನಗರಪಾಲಿಕೆಗಳು ಪಾಲ್ಗೊಳ್ಳುತ್ತವೆ.
ಜನಸಂಖ್ಯೆ
2011ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು 6,11,30,704 ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ 3,10,57,742 (50.80%) ಹಾಗು ಸ್ತೀಯರ ಸಂಖ್ಯೆ 3,00,72,962 (49.19%) ಅಂದರೆ ಪ್ರತಿ 1000 ಪುರುಷರಿಗೆ 968 ಸ್ತೀಯರು. 2001/2001ರ ಜನಸಂಖ್ಯೆಕ್ಕಿಂತ 2011/2011ರ ಜನಸಂಖ್ಯೆ 15.67%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು 318.8/ಚ.ಕಿಮೀ.ರಷ್ಟಿದೆ ಹಾಗು ನಗರ ಪ್ರದೇಶಗಳಲ್ಲಿ 38.57% ರಷ್ಟು ಜನ ವಾಸಿಸುತ್ತಾರೆ.
ಸಾಕ್ಷರತೆಯು 75.6%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು 82.85% ಮತ್ತು ಸ್ತೀಯರ ಸಾಕ್ಷರತೆಯು 68.13%ರಷ್ಟಿದೆ. ಜನಸಂಖ್ಯೆಯ 83% ಹಿಂದುಗಳು, 11% ಮುಸಲ್ಮಾನರು, 4% ಕ್ರೈಸ್ತರು, 0.78% ಜೈನರು, 0.73% ಬೌದ್ಧರು ಮತ್ತು ಉಳಿದವರು ಅನ್ಯ ಧರ್ಮದವರು. ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು 64.75%ರಷ್ಟು ಜನರ ಮಾತೃಭಾಷೆಯಾಗಿದೆ.
1991ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ 9.72% ಉರ್ದು, 8.34% ತೆಲುಗು, 5.46% ತಮಿಳು, 3.95% ಮರಾಠಿ, 3.38% ತುಳು, 1.87% ಹಿಂದಿ, 1.78% ಕೊಂಕಣಿ, 1.69% ಮಲಯಾಳಂ ಮತ್ತು 0.25% ಕೊಡವ ತಕ್ ಮಾತಾಡುವ ಜನರಿದ್ದರು.ಕರ್ನಾಟಕದ ಜನನ ದರವು 19.9 (ಪ್ರತಿ ಸಾವಿರ ಜನರಿಗೆ), ಮೃತ್ಯು ದರವು 7.3 (ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು 47 (ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು (ಜನನ ಸಮಯದಲ್ಲಿ) ದರವು 213 (ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು (ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) 2.1 ಆಗಿದೆ.[೨೦]
ಕಡೆಯ ಬಾರಿಗೆ ಇಂತಹ ಗಣತಿ ನಡೆದಿದ್ದು 2011ರಲ್ಲಿ. ಭಾರತದ ಒಟ್ಟು 4,37,06,512 (4.37 ಕೋಟಿ) ಜನ ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಈ ಗಣತಿ ಕಂಡುಕೊಂಡಿತು. ತನ್ನನ್ನು ಹೊರತುಪಡಿಸಿಯೂ, ತನ್ನ ಮಾತೃಭಾಷೆಯೇ ‘ನಮ್ಮದು ಕೂಡ’ ಎಂದು ಹೇಳಿಕೊಳ್ಳುವವರ ಸಂಖ್ಯೆ 4.37 ಕೋಟಿಗಿಂತ ಹೆಚ್ಚು ಎಂಬುದು ಗೊತ್ತಾದಾಗ ಹೆಮ್ಮೆಯಾಗುವುದು ಸಹಜ. 2001ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಕನ್ನಡ ಮಾತನಾಡುವವರ ಬೆಳವಣಿಗೆ ಪ್ರಮಾಣ ಶೇಕಡ 16ರಷ್ಟು (ನಿಖರವಾಗಿ ಹೇಳಬೇಕೆಂದರೆ, ಅದು ಶೇಕಡ 15.99ರಷ್ಟು). ಇದು ಕೂಡ ಮೇಲ್ನೋಟಕ್ಕೆ ಒಳ್ಳೆಯ ಚಿತ್ರಣವನ್ನೇ ನೀಡುತ್ತದೆ.
ಕನ್ನಡ ಮಾತನಾಡುವವರು ಎಂದು ಜನಗಣತಿ ನೀಡಿರುವ ಅಂಕಿ-ಅಂಶಗಳಲ್ಲಿ ಬಡಗ ಭಾಷಿಗರು (1,33,550 ಜನ), ಕುರುಂಬ ಭಾಷಿಗರು (24,189 ಜನ), "ಇತರ ಭಾಷಿಗರು" (30,244 ಜನ) ಕೂಡ ಸೇರಿದ್ದಾರೆ. ಹಾಗೆಯೇ, ಜನಗಣತಿಯು "ಪ್ರಾಕೃತ" (?) ಎಂದು ಕರೆದಿರುವ 12,257 ಜನ ಕೂಡ ಸೇರಿದ್ದಾರೆ. ಇವನ್ನೆಲ್ಲ ಪರಿಗಣಿಸಿದಾಗ, ಕನ್ನಡವನ್ನೇ ಮಾತನಾಡುವವರ ಸಂಖ್ಯೆ 4,35,06,272ಕ್ಕೆ (4.35 ಕೋಟಿ) ಇಳಿಯುತ್ತದೆ.[೨೧]
ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಜ್ಯ. ೨೦೦೮-೦೯ರ ಆರ್ಥಿಕ ಬೆಳವಣಿಗೆ ದರದ ಪ್ರಕಾರವಾಗಿ ರಾಜ್ಯದ ಅಭಿವೃದ್ದಿ ದರವು $೫೮.೨೩ರಷ್ಟಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತಲಾದಾಯದಲ್ಲಿಯೂ ಅತ್ಯಂತ ವೇಗದ ಬೆಳವಣಿಗೆಯನ್ನು ಕಳೆದೊಂದು ದಶಕದಲ್ಲಿ ಕರ್ನಾಟಕ ರಾಜ್ಯ ದಾಖಲಿಸಿದೆ. ತಲಾದಾಯದ ಜಿಡಿಪಿ ಅಂಕಿ ಅಂಶಗಳ ಅನುಸಾರ ರಾಜ್ಯವು ದೇಶದ ರಾಜ್ಯಗಳಲ್ಲಿ ೬ ನೇ ಸ್ಥಾನದಲ್ಲಿದೆ.
೨೦೦೬ರ ಸೆಪ್ಟೆಂಬರ್ ತಿಂಗಳವರೆಗೆ ಒಟ್ತು ೭೮,೦೯೭ ರೂಪಾಯಿಗಳ ವಿದೇಶಿ ಬಂಡವಾಳ ಹರಿದು ಬಂದಿರುತ್ತದೆ. ೨೦೦೪ರ ಅಂತ್ಯದ ವೇಳೆಗೆ ರಾಜ್ಯದ ನಿರುದ್ಯೋಗ ಪ್ರಮಾಣ ೪.೯೪% ರಷ್ಟಿದ್ದು ಇದೇ ವೇಳೆ ದೇಶದಲ್ಲಿನ ನಿರುದ್ಯೋಗದ ಪ್ರಮಾಣವು ೫.೯೯% ಇದ್ದುದು ಗಮನಾರ್ಹ ಅಂಶ. ಅದೇ ಸಮಯದಲ್ಲಿ ಕರ್ನಾಟಕದ ಹಣದುಬ್ಬರ ದರವೂ ಕೂಡ ರಾಷ್ತ್ರೀಯ ಹಣದುಬ್ಬರ ದರಕ್ಕಿಂತಲೂ ಕಡಿಮೆ ಯಾಗಿತ್ತು. ರಾಷ್ಟ್ರದ ಹಣದುಬ್ಬರ ಪ್ರಮಾಣ ೪.೭% ಇದ್ದರೆ, ರಾಜ್ಯದ ಹಣದುಬ್ಬರ ದರ ೪.೪% ಇತ್ತು.
ದೇಶದಲ್ಲಿನ ಬಡತನದ ಅಂದಾಜು ೨೭% ಆಗಿದ್ದರೆ ಕರ್ನಾಟಕದಲ್ಲಿ ಅದು ೧೭% ಆಗಿರುತ್ತದೆ. ರಾಜ್ಯದಲ್ಲಿ ಒಟ್ಟು ೫೬% ದಷ್ಟು ಮಂದಿ ಕೃಷಿಯಾಧಾರಿತ ಉದ್ಯೋಗಸ್ಥರಾಗಿದ್ದು ಒಟ್ತು ೧೨.೩೧ ಮಿಲಿಯನ್ ಹೆಕ್ಟೇರ್ ನಷ್ಟು ಭೂಮಿಯನ್ನು ಕೃಷಿಗಾಗಿ ಬಳಸಲಾಗುತ್ತಿದೆ, ಇದು ರಾಜ್ಯದ ಒಟ್ಟು ಭೂಪ್ರದೇಶದ ೬೪%ರಷ್ಟಾಗುತ್ತದೆ. ಇದರಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮಾನ್ಸೂನ್ ಮಾರುತ ತರುವ ಮಳೆಯನ್ನವಲಂಬಿಸಿದ್ದರೆ, ೨೬.೫೫ ದಷ್ಟು ಭೂಮಿಯು ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ.
ಕರ್ನಾಟಕದಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿ ವಲಯದ ಕೈಗಾರಿಕೆಗಳಿದ್ದು ಅವುಗಳಲ್ಲಿ ಕೆಲ ಪ್ರಮುಖವಾದವುಗಳನ್ನು ಹೀಗೆ ಹೆಸರಿಸಬಹುದು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಇನ್ಫೋಸಿಸ್ ಮೊದಲಾದವು. ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಶಕಿ ಸಂಪನ್ಮೂಲ ಸಂಶೋಧನಾ ಕೇಂದ್ರ, ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರದ ಪ್ರಧಾನ ಕಛೇರಿಗಳಿರುವುದು ಕರ್ನಾಟಕದ ಬೆಂಗಳೂರಿನಲ್ಲಿ.
ಇದಲ್ಲದೆ ಮಂಗಳೂರಿನಲ್ಲಿ ಮಂಗಳೂರು ರಿಫೈನರಿ ಪೆತ್ರೋಕೆಮಿಕಲ್ಸ್ ಲಿಮಿಟೆಡ್[೨೨] ಎನ್ನುವ ತೈಲೋತ್ಪನ್ನ ಕೈಗಾರಿಕ ಘಟಕವೂ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ೧೯೮೦ರಿಂದ ಆರಂಭವಾದ ಮಹಿತಿ ತಂತ್ರಜ್ಞಾನ ಉದ್ಯಮ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ೨೦೦೭ ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಸುಮಾರು ೨೦೦೦ ಮಾಹಿತಿ ತಂತ್ರಜ್ಞಾನ ಘಟಕಗಳಿವೆ.
ದೇಶದ ಐಟಿ ದಿಗ್ಗಜ ಸಂಸ್ಥೆಗಳೆನಿಸಿದ ಇನ್ಫೋಸಿಸ್, ವಿಪ್ರೋ ಕೂಡ ಕರ್ನಾಟಕದಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ೨೦೦೬-೦೭ರ ಅಂಕಿ ಅಂಶಗಳ ಅಂದಾಜಿನ ಪ್ರಕಾರ ದೇಶದ ೩೮% ದಷ್ಟು ಮಾಹಿತಿ ತಂತ್ರಜ್ಞಾನ ರಪ್ತು ವಹಿವಾಟು ಕರ್ನಾಟಕದಿಂದ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೆಂಗಳೂರು "ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ" ಎಂದು ಪ್ರಸಿದ್ಧವಾಗಿದೆ.
ಕರ್ನಾಟಕವು ರೇಷ್ಮೆ ಉದ್ಯಮಕ್ಕೂ ಹೆಸರಾಗಿದ್ದು ರಾಜ್ಯದ ಮೈಸೂರ್ ಸಿಲ್ಕ್ ವಿಶ್ವವ್ಯಾಪಿ ಮನ್ನಣೆ ಹೊಂದಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮುದ್ದೇನಹಳ್ಳಿ ಸಮೀಪ "ಸಿಲ್ಕ್ ಸಿಟಿ" ನಿರ್ಮಾಣಕ್ಕಾಗಿ ಸುಮಾರು ೭೦ ಕೋಟಿ ರೂಪಾಯಿಗಳನ್ನ ವಿನಿಯೋಗಿಸಲು ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯು ಸಹ ರಾಜ್ಯವು ಮುಂಚೂಣಿಯಲ್ಲಿದ್ದು ದೇಶದ ೭ ಪ್ರಧಾನ ರಾಷ್ಟ್ರೀಕೃತ ಬ್ಯಾಂಕುಗಳ ಮೂಲ ನೆಲೆ ಇರುವುದು ಕರ್ನಾಟಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ.
ಕರ್ನಾಟಕದ ಹಟ್ಟಿ ಚಿನ್ನದ ಗಣಿಯು ದೇಶದಲ್ಲೇ ಅತಿ ಹೆಚ್ಚು ಮತ್ತು ಪ್ರಾಥಮಿಕ ಚಿನ್ನ ಉತ್ಪಾದಿಸುವ ಏಕೈಕ ಚಿನ್ನದ ಗಣಿಯಾಗಿದೆ.
ಕರ್ನಾಟಕದಲ್ಲಿ ಜನಿಸಿದ ಬ್ಯಾಂಕುಗಳು
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಗಳನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಅಂತ ಕರೆಯುತ್ತಾರೆ. 1880 ಮತ್ತು 1935 ರ ನಡುವೆ, ಕರಾವಳಿ ಕರ್ನಾಟಕದಲ್ಲಿ 22 ಬ್ಯಾಂಕುಗಳನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ಒಂಬತ್ತು ಮಂಗಳೂರು ನಗರದಲ್ಲೇ ಇದ್ದವು.
ವಿಧಾನ ಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳ ಒಕ್ಕೂಟದ ನಾಯಕರು ಮುಖ್ಯಮಂತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ.
ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. ರಾಜ್ಯ ದಲ್ಲಿ ಒಟ್ಟು ೧.೨೫ ಕೋಟಿ ಜಾನುವಾರುಗಳಿವೆ. ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದಿಂದಾಗಿ ೧೪,೪೪೧ (೧೯-೨-೨೦೧೪ ಕ್ಕೆ) ಜಾನುವಾರುಗಳು ಸತ್ತಿವೆ; ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ. ಹಾಲಿನ ಉತ್ಪಾದನೆ ವರ್ಷಕ್ಕೆ ೪೯ ಲಕ್ಷ ಲೀಟರ್ ನಿಂದ ೫೨-೫೩ ಉತ್ಪಾದನೆ ಆಗುತ್ತದೆ. ಸುಮಾರು ೧೫ ಲಕ್ಷ ಲೀಟರ್ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿದ್ದು, ಸಿಂಗಪುರ, ರಷ್ಯಾ, ಶ್ರೀಲಂಕಾ, ಮ್ಯನ್ಮಾರ್ ಮೊದಲಾದ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ (19-2-2014 ಹಾಲು ಮಹಾ ಮಂಡಳಿಯ ನಿರ್ದೇಶಕ – ಎಂ. ಎಸ್. ಪ್ರೇಮನಾಥ್ ಬೆಂಗಳೂರು ಸುದ್ದಿಗೋಷ್ಠಿ – ಸುದ್ದಿಮಾಧ್ಯಮ- ಪ್ರಜಾವಾಣಿ).
ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.
ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.
ಕಲೆ
ಬಿದರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ. ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದರಿ ಕಲೆಯ ಊಡುಗೋರೆ USA ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ. ಇವು ಬಿದರಿ ಕಲೆಯ ಕೆಲವು ಉಪಾದಿಗಳು.ಇತ್ತೀಚೆಗೆ ಬಿದರಿಕಲೆಗೆ ಹೊಸ ಆಯಾಮಗಳನ್ನು ನೀಡಲಾಗಿದೆ. ಬುದ್ಧನ ರೂಪ ವನ್ನು ಹಿಂದಿ ಗಿಂತಲೂ ವಿಭಿನ್ನವಾಗಿ ಗ್ರಹಿಸಿದ ಶಿಲ್ಪಗಳು ಸಮಕಾಲೀನ ಕುಶಲಿಗಳಿಂದ ಮೂಡಿ ಬಂದಿವೆ.
↑"Figures at a glance"(PDF). 2011 Provisional census data. Ministry of Home Affairs, Government of India. Archived(PDF) from the original on 24 October 2011. Retrieved 17 September 2011.
↑"Sub-national HDI – Area Database". Global Data Lab (in ಇಂಗ್ಲಿಷ್). Institute for Management Research, Radboud University. Archived from the original on 23 September 2018. Retrieved 25 September 2018.
↑Huq, Iteshamul, ed. (2015). "Introduction"(PDF). A Handbook of Karnataka (Fifth ed.). Karnataka Gazetteer Department. p. 48. Archived(PDF) from the original on 23 May 2018. Retrieved 22 May 2018.